Type Here to Get Search Results !

ಹುಲಿರಾಯ

Actioncut Studio 0
ನಾವು ಕೇಳಿರುವ ಪುಣ್ಯಕೋಟಿ ಕಥೆಯಲ್ಲಿ ಹಸುವಿನ ಮುಗ್ಧತೆಗೆ ಹುಲಿ ಕರಗುತ್ತದೆ. ಈ ಸಿನಿಮಾದಲ್ಲಿ ಹುಲಿ ಹಸುವಾಗಿದೆ. ಸಿಟಿ ಹುಲಿಯಾಗಿದೆ. 
ಹೆಸರಿಗೆ ಹುಲಿರಾಯನಾದ್ರೂ , ಅಮ್ಮನಿಗೆ ಹೊಡೆಯೋನಾದ್ರೂ, ಮನಸು ಕರುವಿನದ್ದು. ಇನ್ನೊಬ್ಬನ ಅಮ್ಮನ ನೆನೆದು ಅಳುವಂಥದ್ದು. ಒಂದು ಥಿಯರಿ ಪ್ರಕಾರ ಎಲ್ಲರಲ್ಲೂ ಒಂದು ನರ್ವ್ ಇರತ್ತಂತೆ. ಅದರ ಕೆಲಸ ಏನಂದ್ರೆ ಡಿಪ್ರೆಶನ್ನಿಂದ ಹೊರಗೆ ತರೋದು. ಅದು ಸ್ಟ್ರಾಂಗ್ ಇದ್ದಾಗ ಎಂಥಾ ಡಿಪ್ರೆಶನ್ ಇದ್ರೂ ಅದರಿಂದ ಬೇಗ ಹೊರಗೆ ಬಂದುಬಿಡ್ತಾನೆ ಮನುಷ್ಯ. ಮಗುವಿನಲ್ಲಿ ಆ ನರ್ವ್ ಸಿಕ್ಕಾಪಟ್ಟೆ ಗಟ್ಟಿಯಾಗಿರತ್ತಂತೆ. ಅದಕ್ಕೇ ಅದು ಅಳ್ತಿದ್ದಾಗ ಏನಾದ್ರೂ ಚೆನಾಗಿರೋದ್ ತೋರಿಸ್ಬಿಟ್ರೆ ತಕ್ಷಣ ಅಳು ನಿಂತೇಹೋಗತ್ತೆ. ಹುಲಿರಾಯನ ಮನಸು ಮಗುವಿನಷ್ಟು ಗಟ್ಟಿ ಅನ್ನೋದಕ್ಕೆ ಲಚ್ಚಿ ಬಂದಾಗ ಅಷ್ಟು ಇಷ್ಟ ಪಟ್ಟ ಮಲ್ಲಿ ನಿಮಿಷಗಳಲ್ಲಿ ಮರೆತುಹೋಗೋದು ತೋರಿಸಿಕೊಡತ್ತೆ.
ಆದರೆ ನರ ಗಟ್ಟಿ ಇದ್ರೂ ಅವನೊಳಗೊಬ್ಬ ನರಭಕ್ಷಕ ಹುಟ್ಟಿಕೊಳ್ತಾನೆ. ಕಾಡಿನ ಅಜ್ಜನ ಕಥೆಯಲ್ಲಿ ಹುಲಿರಾಯ ಸುರೇಶನ ಮೂಲಕ ಭೋರ್ಗರೆದು ಹರಿಯುತ್ತಾನೆ..
ಕ್ಯಾನ್ವಾಸು ದೊಡ್ಡದಿದ್ದಾಗ ಕಥೆಯನ್ನ ಪೋಣಿಸಲು ಸಾಕಷ್ಟು ಎಚ್ಚರವಹಿಸಬೇಕಾಗುತ್ತದೆ. ಅಂಥ ಪೋಣಿಸುವಿಕೆಗೆ ಇಲ್ಲಿ ಸಾಥ್ ಕೊಟ್ಟಿದ್ದು ರವಿಯವರ ಕ್ಯಾಮರಾ ಕೆಲಸ. ನದಿ ತೀರದ ಏರಿಯಲ್ ಶಾಟ್ ಗಳು, ಸುರೇಶ ಮಲ್ಲಿಯನ್ನ ಫಾಲೋ ಮಾಡುವಾಗ ಫೋರ್ ಗ್ರೌಂಡಲ್ಲಿ ಎರಡು ಕಡ್ಡಿಗೆ ಬೆಸೆದ ಜೇಡರ ಬಲೆ, ಮಲ್ಲಿ ಮುಂದೆ ಹೋಗುವಾಗ ಹಿಂದೆ ಮರದಹಿಂದಿನಿಂದ ಹುಲಿಯೇ ಬಂದಹಾಗನ್ನಿಸೋ ಸುರೇಶನ ಶರ್ಟಿನ ಹುಲಿಮುಖದ ರಿವೀಲ್.. ಇತ್ಯಾದಿಗಳು ಚಿತ್ರಕ್ಕೆ ಬೇರೆಯದ್ದೇ ಭಾವ ಕೊಡುತ್ತವೆ.
ಚಿತ್ರವನ್ನು ಅಕ್ಷರಶಃ ಅನುಭವಿಸಿ ಆಳಿದ್ದು ಕಲಾವಿದ ಬಾಲು ನಾಗೇಂದ್ರ. ಮೊಂಡುತನ, ಸ್ವರ, ಉಚ್ಚಾರಣೆ, ಸಡನ್ನಾಗಿ ಸಿಟ್ಟಿನಿಂದ ಅಳುವಿಗಿಳಿಯುವಾಗಿನ pause ಗಳಲ್ಲಿನ ಅವರ ಅಭಿನಯ ಇಡೀ ಸಿನಿಮಾವನ್ನ ಶೇಪ್ ಮಾಡಿದೆ..

ವಾಚ್ ಮನ್ ಗಿರಿಯಪ್ಪ, ಬ್ರೋಕರಪ್ಪ , JD , ಮಲ್ಲಿ ಹಾಗೂ ಸಹನಟರ ಅಭಿನಯ ನೀಟ್..
ಮೊದಲಿಂದ ಮೇಕಪ್ ಡಲ್ ಮಾಡಿದ ಮುಖಗಳನ್ನೇ ನೋಡುತ್ತ ಕೂತ ಪ್ರೇಕ್ಷಕನಿಗೆ ಸಡನ್ನಾಗಿ ಫೀಲ್ ಗುಡ್ ಅನ್ನಿಸುವುದು ಮದ್ರಾಸಿನ ಬೀದಿಯಲ್ಲಿ ಅಪರೂಪಕ್ಕೆ ಕಾಣೋ ನಾರ್ತಿ ಹುಡುಗಿಯ ಥರ ಅನ್ನಿಸುವ ನಾಯಕಿ ದಿವ್ಯಾ ಎಂಟ್ರಿಯಾದಾಗ. ಕೆಲವು ಸಿನಿಮಾಗಳಲ್ಲಿ ಕಥೆ ಹೀಗೆ ಇನ್ನೊಂದು ತಿರುವಿಗೆ ತೆಗೆದುಕೊಂಡಾಗ ಪ್ರೇಕ್ಷಕ ರೋಸಿಹೋಗ್ತಾನೆ. 'ಮತ್ತೇನೋ ಪುರಾಣ ಶುರುವಾಯ್ತಲ್ಲ ಗುರೂ' ಅನ್ನೋ ಮಾತನ್ನ ದಿವ್ಯಾ ಅಭಿನಯ ಮರೆಸುತ್ತದೆ. ಚಿತ್ರವನ್ನು ನೀಟಾಗಿ ಕೊನೆಗೊಳಿಸಲು ಅವರ ಕಾಂಟ್ರಿಬ್ಯೂಶನ್ ಗಟ್ಟಿಯಾಗಿದೆ..
ಅರ್ಜುನ್ ರಾಮು ಅವರ ಹಿನ್ನೆಲೆ ಸಂಗೀತ ಚಿತ್ರದ ಇನ್ನೊಂದು ದೊಡ್ಡ ಪ್ಲಸ್.. ತೇಜಸ್ವಿ ಹರಿದಾಸ್ ಹಾಡಿರುವ "ವಲಸೆ ಬಂದವರೇ.." ಹಾಡು ಚಿತ್ರದಿಂದ ದಕ್ಕುವ ಬೋನಸ್. ಸ್ಪರ್ಶಾ ಹಾಗೂ ಗಣೇಶ್ ಹಾಡಿರುವ , ನಂದಿನಿಯವರ ಸಾಹಿತ್ಯವಿರುವ "ಹೇ ಹುಡುಗಿ" ಹಾಡು ಕೇಳೋಕೂ ಚಂದ ನೋಡೋಕೂ ಚಂದ.
ಅರವಿಂದ್ ಕೌಶಿಕ್ ರ ನಿರ್ದೇಶನ ಹಾಗೂ ಶಿಲ್ಪಾ ಅರವಿಂದ್ ರ ಕಥಾ ವಿಸ್ತರಣೆ ಚಿತ್ರ ನೋಡುವಾಗ ಒಂದು ಬೇರೆ ಥರದ ಅನುಭವವಕ್ಕೆ ನೋಡುಗನನ್ನ ಬರಮಾಡಿಕೊಳ್ಳುತ್ತಾ ಹೋಗುತ್ತದೆ.. ಉಳಿದವರು ಕಂಡಂತೆಯ ರಿಚ್ಚಿಯಂತೆ ಹುಲಿರಾಯದ ಸುರೇಶನನ್ನ ಶಾಶ್ವತವಾಗಿ ನೋಡುಗರ ಮನದಲ್ಲಿ ಮೂಡಿಸಲು ಅವರ ಶ್ರಮ ಗೆದ್ದಿದೆ.
ಹಾಗಂತ ಈ ಹುಲಿರಾಯ ಸಿನಿಮಾ ಪೂರ್ತಿ ಘರ್ಜಿಸುವುದಿಲ್ಲ . ಕೆಲವು ಕಡೆ ಪ್ರೇಕ್ಷಕನ ಪೇಶೆನ್ಸ್ ಟೆಸ್ಟ್ ಮಾಡುತ್ತಾನೆ. ಸಾಫ್ಟ್ ವೇರ್ ಇಂಜಿನಿಯರ್ ಇರಿಟೇಟ್ ಮಾಡುತ್ತಾನೆ. ತಾತನ extreme close up ಗಳ ಅತಿಯಾದ ಬಳಕೆ ಕಣ್ಣು ನೋಯಿಸುತ್ತದೆ. ದೊಡ್ಡ ಕ್ಯಾನ್ವಾಸಿಗೆ ಕೆಲವುಕಡೆ ಬಣ್ಣಕಮ್ಮಿಬಿತ್ತಾ ಅನ್ನಿಸೋದೂ ಆಗುತ್ತದೆ.
ಇವೆಲ್ಲವನ್ನೂ ಮೀರಿ ಹುಲಿರಾಯ ಗೆದ್ದುಬಿಡುತ್ತಾನೆ. ದೇವರಾಗದಿದ್ದರೂ ದೆವ್ವವಂತೂ ಆಗುವುದಿಲ್ಲ. ಟಾಕೀಸಿಂದ ಹೊರಗೆ ಬಂದಮೇಲೂ ಒಂದಿಷ್ಟು ಯೋಚಿಸಿಕೊಳ್ಳುತ್ತಾನೆ. ಇವತ್ತೇ ಹೋಗಿ ನೋಡಿಬನ್ನಿ..

Post a Comment

0 Comments
* Please Don't Spam Here. All the Comments are Reviewed by Admin.
Chat via WhatsApp